ಶಿವಮೊಗ್ಗ ತಹಶೀಲ್ದಾರ್ ನಾಗರಾಜ ಅಮಾನತು

ಶಿವಮೊಗ್ಗ,ಸೆ.12: ಇಲ್ಲಿನ ತಹಶೀಲ್ದಾರ್ ಎನ್ ಜೆ ನಾಗರಾಜ್ ಅವರನ್ನು ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ನಾಗರಾಜ್ ಅವರು ಹೊಳಲ್ಕೆರೆ ತಾಲೂಕು ತಹಶೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಅವರ ಮೇಲೆ ಲೋಕಾಯುಕ್ತ ರೇಡ್ ಆಗಿತ್ತು. ಆನಂತರ ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕರು, ಪ್ರಕರಣಾ ತನಿಖಾ ವರದಿ ಆಧರಿಸಿ, ನಾಗರಾಜ್ ಅವರನ್ನು ಅಮಾನತ್ತುಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರದ ಉಲ್ಲೇಖದಂತೆ ಕರ್ನಾ ಟಕ ಸರ್ಕಾರ ತನ್ನ ನಡಾವಳಿ ಯಲ್ಲಿ ನಾಗರಾಜ್ರನ್ನು ಅಮಾನತ್ತುಗೊಳಿಸಿ ಇಂದು ಆದೇಶಿಸಿದೆ.
ಸರ್ಕಾರದ ಆದೇಶದಲ್ಲಿ ಏನಿದೆ:
ಸರ್ಕಾರದ ಆದೇಶ ಸಂಖ್ಯೆ:ಕಂಇ 45 ಎಎಸ್ಡಿ 2023, ಬೆಂಗಳೂರು ದಿನಾಂಕ:12.09.2023 .ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆ ಯಲ್ಲಿ, ಸರ್ಕಾರವು ಎನ್.ಜೆ. ನಾಗರಾಜ, ಹಿಂದಿನ ತಹಶೀಲ್ದಾರ್ ಗ್ರೇಡ್-1 ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ (ಹಾಲಿ ತಹಶೀಲ್ದಾರ್ ಗ್ರೇಡ್-1, ಶಿವಮೊಗ್ಗ ತಾಲ್ಲೂಕು ರವರ ವಿರುದ್ಧ ದಾಖಲಾದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018)ರ ಕಲಂ 13(1)(29), 13(2) ರನ್ವಯ ದಾಖಲಾದ ಕ್ರಿಮಿನಲ್ ಮೊಕದ್ದಮ ಸಂಖ್ಯೆ:11/2023 ರಲ್ಲಿನ ಆರೋಪದ ಸಂಬಂಧ ಅವರ ವಿರುದ್ಧ ಇಲಾಖಾ ವಿಚಾರಣೆ/ತನಿಖೆಯನ್ನು ಬಾಕಿಯಿರಿಸಿ ಕರ್ನಾಟಕ ನಾಗರಿಕ ಸೇವಾ (ವ.ನಿ., ಮೇ) ನಿಯಮ ಗಳು-1957 ರ ನಿಯಮ-10(1)(ಎಎ) ರನ್ವಯ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆ ಲೋಕಾಯುಕ್ತ ಪೊಲೀಸರು ಕೋರ್ಟ್ ಅನುಮತಿ ಪಡೆದು ವಿವಿಧೆಡೆ ರೇಡ್ ನಡೆಸಿದ್ದರು. ನಾಗರಾಜ್ ಅವರ ವಿರುದ್ಧವೂ ರೇಡ್ ನಡೆದಿತ್ತು. ಈ ವೇಳೆ ಶಿಕಾರಿಪುರ ಟೌನ್, ಶಿವಮೊಗ್ಗ, ಹೊಳಲ್ಕೆರೆ ಮತ್ತು ವಿವಿದೆಡೆ ದಾಳಿ ನಡೆದಿತ್ತು. ಈ ವೇಳೆ ಆದಾಯಕ್ಕೂ ಮೀರಿದ ಆಸ್ತಿ ಗಳಿಸಿದ ಬಗ್ಗೆ ಆರೋಪಿಸಲಾಗಿತ್ತು.